Slide
Slide
Slide
previous arrow
next arrow

ಅರಣ್ಯ ವರ್ಕಿಂಗ್ ಪ್ಲಾನ್ ಮಾನದಂಡ ಬದಲಾಗಲಿ: ಅನಂತ ಅಶೀಸರ ಅಭಿಮತ

300x250 AD

ಶಿರಸಿ: ಅರಣ್ಯ ಪರಿಸರ ಮಂತ್ರಾಲಯ, ಭಾರತ ಸರ್ಕಾರ, ಅರಣ್ಯ ಇಲಾಖೆ ಕರ್ನಾಟಕ, ಇನ್ಸಿಟ್ಯೂಟ್ ಆಫ್ ವುಡ್ ಸೈನ್ಸ್ & ಟೆಕ್ನಾಲಜಿ, ಜಂಟಿ ಆಶ್ರಯದಲ್ಲಿ ವರ್ಕಿಂಗ್ ಪ್ಲಾನ್- 2023ರ ಕುರಿತ ರಾಷ್ಟ್ರೀಯ ಕಾರ್ಯಾಗಾರ ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯಿತು.

ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭಾಗವಹಿಸಿ, ಪಶ್ಚಿಮ ಘಟ್ಟದ ಸಂರಕ್ಷಣೆ ಹಿನ್ನೆಲೆಯಲ್ಲಿ ವರ್ಕಿಂಗ್ ಪ್ಲಾನ್‌ನಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ವಿವರ ಮಂಡನೆ ಮಾಡಿದರು.

ವಿಕೇಂದ್ರೀಕೃತ ಕ್ರಿಯಾ ಯೋಜನೆ: ಸ್ಥಳೀಯ ಮಟ್ಟದಲ್ಲಿ ಅರಣ್ಯ ವಿಭಾಗ ಮಟ್ಟದಲ್ಲಿ ಅರಣ್ಯ ನಿರ್ವಹಣೆಗೆ 10 ವರ್ಷದ ಕ್ರಿಯಾ ಯೋಜನೆ ರೂಪಿಸುವ ಪದ್ಧತಿ ನಮ್ಮ ದೇಶದ ಅರಣ್ಯ ಇಲಾಖೆಯ ಅನನ್ಯ ಪರಂಪರೆ, ವಿಕೇಂದ್ರಕೃತವಾಗಿ ಸಿದ್ಧವಾಗುವ ವರ್ಕಿಂಗ್ ಪ್ಲಾನ್ ತಾತ್ವಿಕವಾಗಿ ಜಗತ್ತಿಗೇ ಮಾದರಿ ಆಗಿದೆ ಎಂದು ಅಶೀಸರ ಅವರು ಶ್ಲಾಘನೆ ಮಾಡಿದರು. ಆದರೆ ಅರಣ್ಯ ವರ್ಕಿಂಗ್ ಪ್ಲಾನ್ ಅದೇ ಹಳೆಯ ವಿಧಾನ, ಸ್ವರೂಪ, ಮಾದರಿಗಳನ್ನು ಮುಂದುವರೆಸಬೇಕೆ ಎಂಬುದು ಚರ್ಚಿಸಬೇಕಾದ ಸಂಗತಿ. 75 ವರ್ಷಗಳ ಹಿಂದಿನ ಅರಣ್ಯ ಮತ್ತು ನಿಸರ್ಗ ಸಮೃದ್ಧಿ ಈಗಿಲ್ಲ. ಹವಾಮಾನ ಬದಲಾವಣೆ, ಬರಗಾಲ, ಅರಣ್ಯನಾಶ, ಉಷ್ಣತಾ ತಾಪಮಾನ, ಭೂಕುಸಿತ ಮುತಾದ ಪ್ರಚಲಿತ ವಿದ್ಯಮಾನಗಳ ಹಿನ್ನೆಲೆಯಲ್ಲಿ ವರ್ಕಿಂಗ್ ಪ್ಲಾನ್ ತಯಾರಿ ಮಾನದಂಡಗಳು ಬದಲಾಗಬೇಕು ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರತಿಪಾದಿಸಿದರು.

ಸುಧಾರಣೆಗೆ ಹಲವು ವರ್ಷಗಳಿಂದ ಒತ್ತಾಯ: ಸರ್ಕಾರದ ಪಶ್ಚಿಮ ಘಟ್ಟ ಕಾರ್ಯಪಡೆ, ಜೀವವೈವಿಧ್ಯ ಮಂಡಳಿ, ರಾಜ್ಯ ಸರ್ಕಾರದ ಭೂಕುಸಿತ ಅಧ್ಯಯನ ಸಮಿತಿ ವಿವಿಧ ತಜ್ಞರು, ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳ ವರದಿಗಳೂ ಅರಣ್ಯ ವರ್ಕಿಂಗ್ ಪ್ಲಾನ್‌ಗೆ ಹಲವು ಸುಧಾರಣೆಗಳನ್ನು ಸೂಚಿಸಿವೆ ಎಂದು ರಾಷ್ಟ್ರೀಯ ಕಾರ್ಯಾಗಾರದ ಗಮನ ಸೆಳೆದರು.

ಹಲವು ಕಾನೂನುಗಳು ಸಮಗ್ರ ದೃಷ್ಠಿಕೋನ ಬೇಕು: ಅರಣ್ಯ, ಜೀವವೈವಿಧ್ಯ ಕಾಯಿದೆ, ಪರಿಸರ ಕಾಯಿದೆ, ಸುಪ್ರೀಂ ಕೋರ್ಟ ಗೋದಾವರಂ ಪ್ರಕರಣ, ಸಿಇಸಿ, ಹೀಗೆ ಹಲವು ಕಾನೂನುಗಳ ಸೇರ್ಪಡೆ, ಆದೇಶಗಳ ಹಿನ್ನೆಲೆಯಲ್ಲಿಯೂ ವರ್ಕಿಂಗ್ ಪ್ಲಾನ್‌ನ ಮಾನದಂಡಗಳು ಬದಲಾಗಬೇಕು. ಸಮಗ್ರ ದೃಷ್ಟಿಕೋನ ಹೊಂದಬೇಕು ಎಂದು ಶ್ರೀ ಅಶೀಸರ ಒತ್ತಾಯ ಮಾಡಿದ್ದಾರೆ.

300x250 AD

ವರ್ಕಿಂಗ್ ಪ್ಲಾನ್ ಕನ್ನಡದಲ್ಲಿ: ಕರ್ನಾಟಕದಲ್ಲಿ ವರ್ಕಿಂಗ್ ಪ್ಲಾನ್ ಕನ್ನಡ ಭಾಷೆಯಲ್ಲಿ ಇರಬೇಕು ಎಂಬ ಅಂಶವನ್ನು ಹತ್ತು ವರ್ಷಗಳಿಂದ ಹೇಳುತ್ತಿದ್ದೇವೆ. ಸ್ಥಳೀಯ ಜನರು, ರೈತರು, ಗ್ರಾಮ ಅರಣ್ಯ ಸಮಿತಿ, ಪಂಚಾಯತ, ಜೀವವೈವಿಧ್ಯ ಸಮಿತಿ, ವನವಾಸಿಗಳಿಗೆ ಓದಲು, ಅರ್ಥೈಸಲು ಸಾಧ್ಯವಾಗಬೇಕು. ಗುಜರಾತಿ ಭಾಷೆಯಲ್ಲಿ ವರ್ಕಿಂಗ್ ಪ್ಲಾನ್ ತಯಾರಾಗುತ್ತಿದೆ ಎಂದು ಅವರು ಉದಾಹರಣೆ ನೀಡಿದರು.

ಘಟ್ಟದಲ್ಲಿ ಮರ ಕಡಿತ ನಿಲ್ಲಿಸಿ: ಭೂಕುಸಿತ ಕಳೆದ 7-8 ವರ್ಷಗಳಿಂದ ಸಾಮಾನ್ಯವಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟದ 23 ತಾಲೂಕುಗಳನ್ನು ಸಂಭಾವ್ಯ ಭೂಕುಸಿತ ತಾಲೂಕುಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಘಟ್ಟ, ಗುಡ್ಡಗಳಲ್ಲಿ ನೆಡುತೋಪು ಬೆಳೆಸುವ, ಕಟಾವು ಮಾಡುವ ಪದ್ಧತಿ ಕೈಬಿಡಬೇಕು. ನೆರಿಯ, ಸುಬ್ರಮಣ್ಯ, ಗೇರುಸೊಪ್ಪ, ಜೋಯಿಡಾ, ತಲಕಾವೇರಿ, ಆಗುಂಬೆಗಳಲ್ಲಿ ನೂರಾರು ಎಕರೆ ನೆಡುತೋಪು ಕಟಾವು ಮಾಡಿದರೆ ಭೂಕುಸಿತಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಎಂದು ರಾಜ್ಯ ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷರಾಗಿದ್ದ ಅಶೀಸರ ಅಭಿಪ್ರಾಯ ನೀಡಿದರು.

ಕೇಂದ್ರ ಸರ್ಕಾರದ ಅರಣ್ಯ-ಪರಿಸರ ಮಂತ್ರಾಲಯದ ಹಿರಿಯ ಅಧಿಕಾರಿಗಳಾದ ಡಾ.ಸುಬ್ರಹ್ಮಣ್ಯ, ಡಾ.ಎಂ.ಪಿ.ಸಿ0ಗ್, ಡಾ.ಮಹೇಶ್ ಶಂಭು, ಕರ್ನಾಟಕ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಾದ ಸುಭಾಷ್ ಮಾಳ್ಕೇಡ್, ಬಿಸ್ವಜಿತ್ ಮಿಶ್ರಾ, ಸೀಮಾ ಗರ್ಗ, ತಜ್ಞರಾದ ಡಾ.ವಾಮನ ಆಚಾರ್ಯ, ಪ್ರೋ. ಸುಹಾಸ್ ಮುಂತಾದವರು ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಗುಜರಾತ, ಹರಿಯಾಣ, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡರು.

Share This
300x250 AD
300x250 AD
300x250 AD
Back to top